Monday, October 6, 2008

ಬೈಂದೂರಿನ ಹೆಸರಾಂತ ಕಲಾ ಸಂಸ್ಥೆ "ಲಾವಣ್ಯ(ರಿ) ಬೈಂದೂರು"

ಬೈಂದೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ "ಲಾವಣ್ಯ" ೧೯೭೭ರಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ ಘಟನೆ. ಈ ಪರಿಸರದ ಹವ್ಯಾಸಿ ಕಲಾವಿದರಾದ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ್ ಕಾರಂತ್, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿ ರತ್ನಾಕರ ಆಚಾರ್ ಇವರೆಲ್ಲಾರ ಆಶಾ ಕೇಂದ್ರವಾಗಿ ಕುಡಿಯೊಡೆದ ಬೈಂದೂರು ತರುಣ ಕಲಾವೃಂದ, ಲಾವಣ್ಯ ಕಲಾವೃಂದವಾಗಿ, ಲಾವಣ್ಯ-ಬೈಂದೂರು, ಹವ್ಯಾಸಿ ಕಲಾ ಸಂಸ್ಥೆಯಾಗಿ ಬೆಳೆದು ಬಂದ ದಿನಗಳ ನೆನಪು ರೋಮಾಂಚಕ.

ಲಾವಣ್ಯ(ರಿ) ಲಾಂಛನ
೧೯೮೦ರಲ್ಲಿ ’ರೊಟ್ಟಿ ಖುಣ’ ನಾಟಕವನ್ನು ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಪ್ರಥಮ ಪಾರಿತೋಷಕ ಹಾಗೂ ಇತರ ಮೊರು ಪಾರೀತೋಷಕ ಪಡೆಯಿತು. ಬೈಂದೂರಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಪ್ರಥಮ ಹಾಗೂ ಇತರ ಮೊರು ಪಾರಿತೋಷಕಗಳನ್ನು ಪಡೆದು ಬೈಂದೂರಿನ ಜನತೆ ಭೇಷ್ ಎನ್ನುವಂತಾಯಿತು. ಅಂದಿನಿಂದ ಹೊಸ ಹೊಸ ಸದಸ್ಯರು ಸೇರುತ್ತಾ ಬಂದರು. ಅಂತು ೧೯೭೭ ರಿಂದ ’ತರುಣ ಕಲಾವಿದರು’, ’ತರುಣ ಕಲಾವೃಂದ’, ’ಲಾವಣ್ಯ ಕಲಾವೃಂದ ಎಂಬ ಹೆಸರಿನಿಂದ ಕರೆಯಿಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನೋಂದಾಯಿಸಲ್ಪಟ್ಟ ಈ ಸಂಸ್ಥೆ "ಲಾವಣ್ಯ(ರಿ) ಬೈಂದೂರು" ಎಂಬ ನೂತನ ನಾಮಕರಣದೊಂದಿಗೆ ಯಶಸ್ವಿ ೩೦ವರ್ಷಗಳನ್ನು ಪೂರೈಸುತ್ತಾ ಬಂದಿದೆ.

ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ನಾಟಕ ಸ್ಪರ್ಧೆ ಹಾಗೂ ಕಲಾ ಉತ್ಸವಗಳನ್ನು ಆಚರಿಸುವುದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು, ಪ್ರತಿ ವರ್ಷ ವಾರ್ಷಿಕೋತ್ಸವದ ಸಮಯದಲ್ಲಿ ಕಲಾರಂಗದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ಇವೇ ಮುಖ್ಯವಾದ ಉದ್ದೇಶಗಳನ್ನು ಸಂಸ್ಥೆಯು ಹೊಂದಿರುತ್ತದೆ.
ನಾಟಕ ವಿಭಾಗದ ಜೊತೆಗೆ ಮಕ್ಕಳ ನಾಟಕ ವಿಭಾಗ, ಭರತ ನಾಟ್ಯ ವಿಭಾಗ, ಸಂಗೀತ ವಿಭಾಗಗಳ ರಚನೆ, ಈ ವರೆಗೆ ಸುಮಾರು ೬೦ ನಾಟಕಗಳ ೩೦೦ ಪ್ರದರ್ಶನಗಳ ನೀಡಿಕೆ, ಶ್ರೀ ಜಿ. ಸೀತಾರಾಮ ಶೆಟ್ಟಿ ಕೂರಾಡಿ ಇವರ ನಿರ್ದೇಶನದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ, ದಶಮಾನೋತ್ಸವ ಸಂದರ್ಭದಲ್ಲಿ ಬೈಂದೂರಿನಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ, ವಿಂಶತಿ ಉತ್ಸವ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ, ೩೦ನೇ ವರ್ಷದ "ರಂಗ ಲಾವಣ್ಯ-೩೦" ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ನಾಟಕೋತ್ಸವ, ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಇದುವರೆಗೂ ಭಾಗವಹಿಸಿದ ಎಲ್ಲಾ ೨೦ ನಾಟಕ ಸ್ಪರ್ಧೆಗಳಲ್ಲಿ ೯ ಬಾರಿ ಪ್ರಥಮ, ೭ ಬಾರಿ ದ್ವಿತೀಯ ಹಾಗೂ ೪ ಬಾರಿ ತೃತೀಯ ಪಾರಿತೋಷಕವನ್ನು ಅಲ್ಲದೇ ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಹಾಗೂ ಇತರೇ ವಿಭಾಗಗಳಲ್ಲಿ ಒಟ್ಟು ೭೩ ಪಾರಿತೋಷಕಗಳ ಗಳಿಕೆ. ಇವೆಲ್ಲವು ಲಾವಣ್ಯ(ರಿ) ಬೈಂದೂರು ಇದರ ಸಾಧನೆಯಾಗಿದೆ.

ಲಾವಣ್ಯ(ರಿ) ಬೈಂದೂರಿನ ವಿವರವಾದ ವರದಿಗೆ ಇಲ್ಲಿ ಕ್ಲಿಕ್ ಮಾಡಿ


Monday, May 5, 2008

ಇತಿಹಾಸ ಪ್ರಸಿದ್ದ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ



ದೇವಾಲದ ಇತಿಹಾಸ
ರಾಮಾಯಣ ಕಾಲದಲ್ಲಿ ಭಗವಾನ್ ರಾಮ ತನ್ನ ಕಪಿಸೇನೆ ಸಮೇತನಾಗಿ ಸೀತಾನ್ವೇಷಣೆಗೆ ರಾಮೇಶ್ವರಕ್ಕೆ ಹೋಗುವ ದಾರಿಯಾಗಿ ಇಲ್ಲಿಗೆ ಬಂದು ಬಿಂದುಋಷಿಗಳ ಕೋರಿಕೆಯಂತೆ ಒಂದು ರಾತ್ರಿ ಬೆಳಗಾಗುವುದರೊಳಗೆ ತನ್ನ ಕಪಿಸೇನೆಯಿಂದ ನಿರ್ಮಿಸಿದ ಈ ದೇವಾಲಯಕ್ಕೆ ಶ್ರೀ ಸೇನೇಶ್ವರ ಎಂಬ ಹೆಸರು ಬಂದಿತು ಎಂಬುವುದು ಒಂದು ಹೇಳಿಕೆ. ಆದರೆ ಇದಕ್ಕೆ ನಿರ್ದಿಷ್ಟವಾದ ಆಧಾರವಿಲ್ಲದ ಕಾರಣ ಪುರಾಣ ಕಥೆಯಾಗಿಯೇ ಉಳಿದಿದೆ.
ಇತಿಹಾಸ ಸಂಶೋಧಕರ ಅಭಿಪಾಯದಂತೆ ೧೧ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳ ಸಾಮಂತನಾಗಿದ್ದ ಸೇನಾ ಅರಸರು ಈ ದೇವಾಲಯವನ್ನು ರಚಿಸಿದ್ದು ಅದರಿಂದಾಗಿ ಇದು ಶ್ರೀ ಸೇನೇಶ್ವರ ಎಂದು ಪ್ರಸಿದ್ದವಾಯಿತು. ಇದು ಹೆಚ್ಚು ತರ್ಕಬದ್ಧವಾಗಿ ಕಂಡುಬರುತ್ತದೆ.



ದೇವಾಲಯದ ಸಂಕ್ಷಿಪ್ತ ಕ್ಷೇತ್ರ ಪರಿಚಯ ಹಾಗೂ ವಿವರ
ಬೈಂದೂರು ಅತ್ಯಂತ ಶ್ರದ್ಧಾ ಕೇಂದ್ರ ಊರಿನ ಹೃದರಭಾಗದಲ್ಲಿರುವ ಶ್ರೀ ಸೇನೇಶ್ವರ ದೇವಾಲಯ. ಇದು ಒಂದು ಸುಂದರವೆನ್ನಬಹುದಾದ ಕಲಾಕೃತಿ. ಗರ್ಭಗುಡಿ, ಸುಕನಾಸಿ ಮತ್ತು ಬಸವ ಮಂಟಪಗಳನ್ನು ಸಂಪೂರ್ಣ ಶಿಲೆಯಿಂದಲೇ ನಿರ್ಮಿಸಿದ್ದಾರೆ. ಸುಕನಾಸಿಯಲ್ಲಿರುವ ಪ್ರತಿಯೊಂದು ಕಂಬದ ಕೆತ್ತನೆ ಚಿತ್ತಾಕರ್ಷಕ. ಇಲ್ಲಿರುವ ಮೊರ್ತಿಗಳು ಮತ್ತು ಬೆಳಕಿನ ಕಿಂಡಿಗಳು ಮನಮೋಹಕ. ಇನ್ನು ನಂದಿ ಮಂಟಪದ ಸೊಬಗೇ ಬೇರೆ. ಕತ್ತೆತ್ತಿ ಮೇಲೆ ನೋಡಿದರೆ ಚಿತ್ತಾರಕಗಳು ಕೆತ್ತಲ್ಪಟ್ಟ ಸಂಪೂರ್ಣ ಶಿಲಾಮಯವಾದ ಮುಚ್ಚಿಗೆ. ಕಂಬಗಳು ಹಾಗೂ ಮಾಡಿನ ರಚನೆ ಕೂಡ ಸುಂದರ. ಇಲ್ಲಿರುವ ನಂದಿಲೋಕ ಮನಮೋಹಕ. ದೊಡ್ಡ ಶಿಲೆಯ ಬೆಟ್ಟವನ್ನೇ ಕಡಿದು ಮಾಡಿದ ಲೇಪಾಕ್ಷಿಯ ಬ್ರಹತ್ ಗಾತ್ರದ ನಂದಿಗೆ ಕೆಳದಿ, ಇಕ್ಕೇರಿ, ಹಳೆಬೀಡುಗಳ ಬಸವಗಳು ಸೊಬಗಿನಲ್ಲಿ ಸರಿಸಾಟಿಯಾಗಲಾರವು. ಇದನ್ನು ಪ್ರತಿಯೊಬ್ಬರು ನೋಡಿಯೇ ತಿಳಿಯಬೇಕು.
ಸುಕನಾಸಿಯ ಜಾಲಂದ್ರಗಳ ಮಧ್ಯದಲ್ಲಿರುವ ಬಾಗಿಲಿನ ಮೇಲ್ಗಡೆ ಅಲಂಕರಿಕವಾದ ಮಕರ ತೋರಣದ ಕೆತ್ತನೆ ಇದೆ. ಇಲ್ಲಿರುವ ದ್ವಾರಪಾಲಕರ ಎರಡು ಮೊರ್ತಿಗಳ ಕೈಯಲ್ಲಿ ಬೇರೆ ಬೇರೆ ಆಯುಧಗಳು ಇರುವುದು ಕುತುಹಲಕಾರಿಯಾಗಿದೆ.
ಸುಕನಾಸಿಯ ಆಕರ್ಷಕ ಕಂಬಗಳ ಬಳಿಯ ಗಮನಿಸಬೇಕಾದ ಇನ್ನಿತರ ಸುಂದರ ದೇವತಾ ವಿಗ್ರಹಗಳು ಗಣೇಶ, ಮಹಿಷಮರ್ದಿನಿ (ಬಲಗೈ ಹಾಗೂ ವಾಣಿಯನ್ನು ಈಗ ಕಳೆದುಕೊಂಡಿರುವ) ಕಣ್ಣಿನ ದೃಷ್ಟಿಯನ್ನೇ ಕೆತ್ತದೆ ಇರುವ ಚತುರ್ಭುಜೆಯಾದ ಸರಸ್ವತಿ,ಮಯೊರವಾಹನ ಸಾರಸ್ಕಂದ ದಶಾವತಾರದ ಸುಂದರ ಕೆತ್ತನೆಯ ಪ್ರಭಾವಳಿಯನ್ನು ಹೊಂದಿದ ಶಂಕ ಚಕ್ರ ಗಧಾ ಪದ್ಮಧಾರಿಯಾದ ಕೇಶವನಾರಾಯಣ ಗರುಡ ವಾಹನನಾದ ಲಕ್ಷ್ಮೀನಾರಾಯಣ, ಬಲಭಾಗ ಶಿವ, ಎಡಭಾಗ ಹರಿಯಾಗಿರುವ ಶಂಕರನಾರಾಯಣ (ಹರಿಹರ). ಈ ಎಲ್ಲಾ ಮೊರ್ತಿಗಳು ಇಡಲ್ಪಟ್ಟಿರುವ ಸುಕನಾಸಿ ಒಂದರ್ಥದಲ್ಲಿ ದೇವ ಸಭೆ ಎಂದರೂ ತಪ್ಪಾಗಲಾರದು. ದಕ್ಷಿಣ ಗೋಡೆಯ ಪಶ್ಚಿಮ ಭಾಗದಲ್ಲಿ ಸಾಲಾಗಿ ಮೊರ್ತಿಗಳನ್ನು ಒಳಗೊಂಡ ರಚನೆಯೊಂದನ್ನು ಕಾಣಬಹುದು. ಮೊದಲಿಗೆ ವೀರಭದ್ರ ಆ ಬಳಿಕ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಎಂಬ ಸಪ್ತ ಮಾತೃಕೆಯರು ಹಾಗೂ ಕೊನೆಯಲ್ಲಿ ಗಣಪತಿಯನ್ನಿ ಒಳಗೊಂಡ ೯ ದೇವತಾ ಚಿತ್ರಗಳಿರುವ ಸುಮಾರು ೧ ಅಡಿ ಎತ್ತರ ೨ ಅಡಿ ಉದ್ದದ ಶಿಲಾಫಲಕವಿದೆ. ಸುಕನಾಸಿಯ ನಾಲ್ಕು ಕಂಬಗಳಲ್ಲಿ ಎಡಭಾಗದ ಸೂಕ್ಷ್ಮ ಕೆತ್ತನೆಗಳು ಒಂದು ರೀತಿಯಲ್ಲಿದ್ದರೆ ಬಲಭಾಗದ ಇನ್ನೆರಡು ಕಂಬಗಳ ಸೂಕ್ಷ್ಮ ಕೆತ್ತನೆಗಳು ಇನ್ನೊಂದು ತೆರನಾಗಿವೆ.
ಹೊಯ್ಸಳ ಶಿಲ್ಪಗಳಲ್ಲಿ ತಪ್ಪದೆ ಹೊಯ್ಸಳ ಲಾಂಛನವು ಕೆತ್ತಲ್ಪಟ್ಟಿರುತ್ತದೆ. ಆದರೆ ಇಲ್ಲಿ ಅದಿಲ್ಲ. ಅದರ ಸ್ಥಾನದಲ್ಲಿ ಮಕರ ತೋರಣ ಕೆತ್ತಲ್ಪಟ್ಟಿರುವುದು ಚಿಂತಕರಿಗೆ ಗಮನಾರ್ಹವಾದುದಾಗಿದೆ ಅಲ್ಲದೇ ಸುಕನಾಸಿಯ ಗೋಡೆಗಳಲ್ಲಿ ಅಲ್ಲಲ್ಲಿ ಕೆಳಮುಖವಾಗಿಡಲ್ಪಟ್ಟ ಇಂಗ್ಲೀಷ್ V ಅಕ್ಷರದಂತೆ ಕಂಡುಬರುವ ಕೆತ್ತನೆ ಹೊಂದಿದ ಶಿಲಾರಚನೆಗಳು ಕಂಡುಬರುತ್ತವೆ. ನಾಲ್ಕು ಕಂಬಗಳ ಮೇಲೆ ನಿಂತಿರುವ ಸುಕನಾಸಿಯಲ್ಲಿ ಕಮಲದಂತಹ ೮ಕೃತಿಗಳಿವೆ. ನಾಲ್ಕು ಕಂಬಗಳ ನಡುವಿರುವ ಮುಚ್ಚಿಗೆಯ ಭಾಗದಲ್ಲಿ ಅಷ್ಠದಿಕ್ಪಾಲಕರ ಮೂರ್ತಿಗಳನ್ನು ಶಾಸ್ತ್ರ ಬದ್ಧವಾಗಿ ಕೆತ್ತಿದ್ದನ್ನು ಕಾಣಬಹುದು. ಈ ಶಿಲೆಯ ದಕ್ಶಿಣೋತ್ತರಕ್ಕೆ ಉದ್ದಕ್ಕೂ ಸೀಲಾಗಿರುವುದು ದುಃಖಕರ ಸಂಗತಿಯಾಗಿದೆ. ಈ ರಚನೆಯ ಮಧ್ಯದಲ್ಲಿ ಇನ್ನೂಂದು ಮೂರ್ತಿ ಶಿಲ್ಪವಿದೆ. ಆದರೆ ಅದು ಕಾರಣಾಂತರಗಳಿಂದ ಭಿನ್ನವಾಗಿದೆ.
ದೇವಕೋಷ್ಟದಲ್ಲಿರುವ ಚತುರ್ಮುಖ ಬ್ರಹ್ಮ, ಕಾಳಭೈರವ, ಚಾಮುಂಡೇಶ್ವರಿಯ ಮೊರ್ತಿಗಳ ಕೆತ್ತನೆಯೊ ಆಕರ್ಷಕವಾಗಿದೆ. ಇಲ್ಲಿರುವ ಇನ್ನೆರಡು ದೇವತೆಗಳು ಗುರುನರಸಿಂಹ ಮತ್ತು ವೀರಭದ್ರ. ಪಾಣಿಪೀಠದ ಮೇಲೆ ಲಿಂಗರೂಪಿಯಾಗಿ ವಿರಾಜಿಸಿರುವ ಸ್ವಾಮಿ ಸೇನೇಶ್ವರನು ಭಾಕ್ತಾಭೀಷ್ಠಪ್ರದಾಯಕನಾಗಿ ಆಕರ್ಷಣೆಯ ಕೇಂದ್ರವಾಗಿರುತ್ತಾನೆ. ಪ್ರತಿ ಸೋಮವಾರವು ಭಕ್ತರು ಬಹು ಸಂಖ್ಯೆಯಲ್ಲಿ ದೇವಾಲಯವನ್ನು ಸಂದರ್ಶಿಸಿ ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಹಲವಾರು ವರ್ಷಗಳ ಹಿಂದೆ ನಿರ್ಮಿಸಲಾದ ದೇವಾಲಯದ ಮರದ ತೇರು ಕಾಷ್ಥಶಿಲ್ಪದ ಸುಂದರ ಮಾದರಿಯಾಗಿ ಕಣ್ಮನ ಸೆಳೆಯುತ್ತದೆ. ಮುಜರಾಯಿ ಇಲಾಖೆಯ ಯಜಮಾನ್ಯಕ್ಕೆ ಒಳಪಟ್ಟ ಈ ದೇವಾಲಯದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಜನರಿಂದ ಆಯ್ಕೆಹೊಂದಿದ ಆಡಲಿತ ಮಂಡಳಿ ಇದೆ. ದೇವಾಲಯದ ಆಡಳಿತಕ್ಕೊಳಪಟ್ಟ ಶಾರದಾ ವೇದಿಕೆಯು ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸುವ ಮೊಲಕ ಸಾರಸ್ವತ ಲೋಕಕ್ಕೆ ಅನುಪಮ ಸೇವೆ ಸಲ್ಲಿಸುತ್ತಿದೆ.
ಈ ದೇವಾಲಯದ ಆಡಲಳಿತಕ್ಕೊಳಪಟ್ಟು ಇನ್ನು ಎರಡು ದೇವಾಲಯಗಳಿವೆ. ಅವು ಬಂಕೇಶ್ವರದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮತ್ತು ಸುಂದರ ಕಡಲತೀರದಲ್ಲಿ ರಮಣೀಯವಾದ ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ತಲೆಯೆತ್ತಿ ನಿಂತಿರುವ ಶ್ರೀ ಸೋಮೇಶ್ವರ ದೇವಾಲಯ. ಸೋಮೇಶ್ವರವು ಕ್ಷೇತ್ರವಾಗಿರುವುದರ ಜೊತೆಗೆ ಅಪೂರ್ವ ಪ್ರವಾಸಿ ತಾಣವು ಆಗಿದೆ. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷ ವೈಶಾಖ ಶುಕ್ಲ ಆದ್ರಾ ನಕ್ಷತ್ರದಂದು ಅತೀ ವಿಜೃಂಭಣೆಯಿಂದ ವಾರ್ಷಿಕ ರಥೋತ್ಸವವು ಜರಗುತ್ತದೆ.



ದೇವಾಲಯದ ಬಗ್ಗೆ ತಜ್ಞರ ಅಭಿಪ್ರಾಯಗಳು
ಬೇಲೂರು ಹಳೆಬೀಡಿನ ಶಿಲ್ಪ ಕಲೆಯನ್ನೇ ಹೋಲುವ ಈ ದೇವಾಲಯವನ್ನು ಡಾ ಗುರುರಾಜ ಭಟ್ಟತಂತಹ ಹಿರಿಯ ವಿದ್ವಾಂಸರು ’ದಕ್ಷಿಣ ಕನ್ನಡದ ಬೇಲೂರು’ ಎಂದು ಬಣ್ಣಿಸಿದ್ದಾರೆ. ಹಾಗಾಗಿ ಇಲ್ಲಿಯ ಶಿಲ್ಪ ಕಲೆಯ ಚೆಲುವಿಗೆ ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಾಗಿಲ್ಲ.
ದೇವಾಲಯದ ಹೊರಸುತ್ತಿನ ಉತ್ತರಭಾಗದ ದೇವಕೋಷ್ಟ (ಗೂಡು)ದಲ್ಲಿರುವ ಚಾಮುಂಡೇಶ್ವರಿ ಅಥವಾ ಚಾಮುಂಡಿ ಕಲ್ಯಾಣಿ ಚಾಲುಕ್ಯರ ಮಾತೃ ದೇವತೆಯಾಗಿದ್ದು ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ ಈ ಚಾಮುಂಡಾದೇವಿಯನ್ನು ಶತ್ರುಗಳ ಲಯಕರ್ತೆಯೆಂಬಂತೆ ಈ ಭೀಕರ ರೂಪದಲ್ಲಿ ಸೇನರು ನಿರ್ಮಿಸಿದ್ದಾರೆ ಎಂಬುವುದು ಇತಿಹಾಸ ಪ್ರಾಧ್ಯಾಪಕ ವೈ. ಉಮನಾಥ ಶೆಣೈ ಅವರ ಅಭಿಪ್ರಾಯ.



ದೇವಾಲಯದ ವಿವಿಧ ನೋಟಗಳು